ಕೋವಿಡ್ ನಿಯಮಾನುಸಾರ ಸೀಮಿತ ಜನರು ಸೇರಿ ಕೊಟ್ಟೂರೇಶ್ವರ ರಥೋತ್ಸವದ ಧಾರ್ಮಿಕ ಕಾರ್ಯ ನಡೆಸಲು ತೀರ್ಮಾನ
1 min readಕೋವಿಡ್ ನಿಯಮಾನುಸಾರ ಸೀಮಿತ ಜನರು ಸೇರಿ ಕೊಟ್ಟೂರೇಶ್ವರ ರಥೋತ್ಸವದ ಧಾರ್ಮಿಕ ಕಾರ್ಯ ನಡೆಸಲು ತೀರ್ಮಾನ
ವಿಜಯನಗರ/ಕೊಟ್ಟೂರು: ಜಿಲ್ಲೆಯ ಪ್ರಮುಖ ಐತಿಹಾಸಿಕ ಸ್ಥಳವಾದ ಕೊಟ್ಟೂರಿನ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ರಥೋತ್ಸವ ಕುರಿತು ಕರೆಯಲಾಗಿದ್ದ ಪೂರ್ವಭಾವಿ ಸಭೆ ಪಟ್ಟಣದ ಶ್ರೀ ಬಾಲಾಜಿ ಕಲ್ಯಾಣ ಮಂಟಪದಲ್ಲಿ ನಡೆಯಿತು.
ಪೂರ್ವಭಾವಿ ಸಭೆಯಲ್ಲಿ ಕೋವಿಡ್ ನಿಯಮಗಳನ್ನು ಅನುಸರಿಸುವುದರ ಮೂಲಕ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ರಥೋತ್ಸವವನ್ನು ನಡೆಸಲು ಸಭೆಯನಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಈ ವೇಳೆ ಗ್ರಾಮದ ಮುಖಂಡರು ಮಾತನಾಡಿ, ಸ್ವಾಮಿಯ ರಥೋತ್ಸವವನ್ನು ನಿಲ್ಲಿಸದೇ ಕೊವಿಡ್ ನ ನಿಯಮಗಳನ್ನು ಅನುಸರಿಸಿ ಧಾರ್ಮಿಕ ಕಾರ್ಯಕ್ರಮ ನಡೆಸಲು ಅನುಮತಿಯನ್ನು ನೀಡಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರು.
ಸಭೆಯ ಅಧ್ಯಕ್ಷತೆವಹಿಸಿದ್ದ ಶಾಸಕ ಭೀಮಾನಾಯ್ಕ ಮಾತನಾಡಿ, ಕರೋನಾ ನಿಯಮಗಳನ್ನು ಪ್ರತಿಯೊಬ್ಬರೂ ಪಾಲಿಸುವ ಮೂಲಕ ಸೋಂಕು ತಡೆಗಟ್ಟಬಹುದಾಗಿರುತ್ತದೆ ಆದ್ದರಿಂದ ಕಾನೂನಿನ ಚೌಕಟ್ಟಿನಲ್ಲಿ ಕೊವಿಡ್ ನಿಯಮಗಳನ್ನು ಪಾಲಿಸುವ ಮೂಲಕ ರಥೋತ್ಸವವನ್ನು ಆಚರಿಸಲು ಸೂಕ್ತ ಬಂದೋಬಸ್ತ್ ನೀಡುವ ಮೂಲಕ ಅನುಮತಿಯನ್ನು ನೀಡಬೇಕು ಎಂದು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿಕೊಂಡರು.
ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾತನಾಡಿ, ಸ್ವಾಮಿಯ ಕೃಪೆ ಆಶೀರ್ವಾದ ನಮ್ಮೆಲ್ಲರಿಗೂ ಬೇಕು ಕಾನೂನಿನ ಮಹತ್ವವನ್ನು ಅರಿತು ಒಂದು ಚೌಕಟ್ಟಿನಲ್ಲಿ ರಥೋತ್ಸವವನ್ನು ಆಚರಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.
ವಿಜಯನಗರ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಮಾತನಾಡಿ, ರಥೋತ್ಸವವನ್ನು ನಿಲ್ಲಿಸಬೇಕು ಎಂದು ಯಾರು ಇಚ್ಚಿಸುವುದಿಲ್ಲ ಏಕೆಂದರೆ ಎಲ್ಲರಿಗೂ ದೇವರ ಆಶೀರ್ವಾದ ಬೇಕು ಹಾಗಂತ 10, 000 ಜನರು ಒಂದು ಕಡೆ ಸೇರಿ ರಥೋತ್ಸವ ಆಚರಿಸಲು ಅವಕಾಶ ಮಾಡಿಕೊಡುವುದು ಸೂಕ್ತವಲ್ಲ, 300-400 ಜನರು ಸೇರಿ ರಥೋತ್ಸವ ಕಾರ್ಯಕ್ರಮವನ್ನು ಆಚರಿಸಲು ಅವಕಾಶ ನೀಡುತ್ತೇವೆ ಎಂದು ತಿಳಿಸಿದರು.
ಕೊಟ್ಟೂರಿನ ಮುಖಂಡರಾದ ಎಂ.ಎಂ.ಜೆ. ಹರ್ಷವರ್ಧನ್ ಮಾತನಾಡಿ, ನಮ್ಮ ಕೊಟ್ಟೂರಿನ ಕೊಟ್ಟೂರೇಶ್ವರ ಸ್ವಾಮಿಯ ರಥೋತ್ಸವವನ್ನು ಆಚರಿಸಲು ಅವಕಾಶವನ್ನು ನೀಡಿದ್ದಕ್ಕಾಗಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಧನ್ಯವಾದಗಳನ್ನು ತಿಳಿಸಿದರು.
ವಿಜಯನಗರ ಜಿಲ್ಲೆ ಯು ಹೆಚ್ಚುವರಿ ಜಿಲ್ಲಾಧಿಕಾರಿ ಚಂದ್ರಶೇಖರಯ್ಯ, ಕೊಟ್ಟೂರು ತಹಶೀಲ್ದಾರ್ ಅನೀಲ್ ಕುಮಾರ್, ಗ್ರಾಮದ ಮುಖಂಡರು, ಕೊಟ್ಟೂರಿನ ಪಟ್ಟಣ ಪಂಚಾಯಿತಿ ಸಿಬ್ಬಂದಿ, ಮುಂತಾದವರು ಉಪಸ್ಥಿತರಿದ್ದರು.