ಪಿಯುಸಿ ಪ್ರವೇಶಕ್ಕೆ ಅಧಿಕ ಶುಲ್ಕ ವಸೂಲಿ: ಪೋಷಕರು ಮತ್ತು ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ
1 min readಪಿಯುಸಿ ಪ್ರವೇಶಕ್ಕೆ ಅಧಿಕ ಶುಲ್ಕ ವಸೂಲಿ: ಪೋಷಕರು ಮತ್ತು ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ
ಹರಪನಹಳ್ಳಿ: ಪಟ್ಟಣದ ಎಸ್ ಎಸ್ ಹೆಚ್ ಜೈನ್ ಪಿಯುಸಿ ಕಾಲೇಜ್ ನಲ್ಲಿ ಪ್ರಥಮ ಪಿಯುಸಿ ಮತ್ತು ದ್ವಿತೀಯ ಪಿಯುಸಿ ಪ್ರವೇಶಾತಿಗೆ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಹೆಚ್ಚಿನ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿ ಪೋಷಕರು ಹಾಗೂ ಬಿಜೆಪಿ ಮುಖಂಡರು ಸೇರಿ ಕಾಲೇಜು ಆವರಣದ ಬಳಿ ಪ್ರತಿಭಟನೆ ನಡೆಸಿ ಕಾಲೇಜಿನ ಕಚೇರಿಯಲ್ಲಿ ಪ್ರವೇಶಾತಿ ತಡೆದ ಘಟನೆ ಗುರುವಾರ ನಡೆದಿದೆ.
ಈ ವೇಳೆ ಮಾತನಾಡಿದ ಬಿಜೆಪಿ ಮುಖಂಡ ಆರ್ ಲೋಕೇಶ್
ಶಿಕ್ಷಣ ಸಂಸ್ಥೆಯವರು ಬಡ ವರ್ಗದ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಬದಲು ಶಿಕ್ಷಣವನ್ನೊಂದು ವ್ಯಾಪಾರಿಕರಣ ಮಾಡಿದೆ
ಹರಪನಹಳ್ಳಿ ಹಿಂದುಳಿದ ತಾಲ್ಲೂಕು ಆಗಿದ್ದು, ಇಲ್ಲಿ ಹೆಚ್ಚಾಗಿ ಕೂಲಿ ಕಾರ್ಮಿಕರು ವಾಸವಾಗಿದ್ದಾರೆ. ಯಾವುದೇ ನೀರಾವರಿ ಸೌಲಭ್ಯ ಹೊಂದಿರದ ಹರಪನಹಳ್ಳಿ ತಾಲ್ಲೂಕು ನಂಜುಂಡಪ್ಪ ವರದಿ ಅನ್ವಯ ಅತ್ಯಂತ ಹಿಂದುಳಿದ ತಾಲ್ಲೂಕು ಎಂಬ ಹಣೆಪಟ್ಟಿ ಕಟ್ಟಿಕೊಂಡಿದೆ. ಜನರು ಕೆಲಸವಿಲ್ಲದೇ ಕಾಫಿ ಸೀಮೆಗೆ ಕೆಲಸ ಅರಸಿ ಗುಳೇ ಹೋಗುತ್ತಿದ್ದಾರೆ. ಅಲ್ಲದೇ ಕಳೆದ ಎರಡು ವರ್ಷದಿಂದ ಕೊರೊನಾ ಸೋಂಕು ಹೆಚ್ಚಳವಾಗಿ ಬಡ ಜನರ ಬದುಕು ಬೀದಿಗೆ ಬಂದಿದೆ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳು ಅಭ್ಯಾಸ ಮಾಡುವುದೇ ದುಸ್ತರವಾಗಿದೆ. ಲಾಕ್ ಡೌನ್ ಹೊಡೆತದಿಂದ ಕಂಗಲಾಗಿರುವ ಪೋಷಕರು ಮಕ್ಕಳನ್ನು ಅಭ್ಯಾಸಕ್ಕೆ ಕಳಿಸಲು ಸ್ಥಳೀಯ ಎಸ್ ಎಸ್ ಹೆಚ್ ಜೈನ್ ಪಿಯುಸಿ ಕಾಲೇಜ್ ನ ಶುಲ್ಕ ನೋಡಿ ದಂಗಾಗಿ ಹೋಗಿದ್ದಾರೆ. ಸರ್ಕಾರದ ನಿಯಮವನ್ನು ಉಲ್ಲಂಘಿಸಿ ಬೇಕಾಬಿಟ್ಟಿ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂದು ದೂರಿದರು.
ಶಿರಾಗನಹಳ್ಳಿ ವಿಶ್ವನಾಥ್ ರವರು ಮಾತನಾಡಿ ಕಾಲೇಜಿನ ಆಡಳಿತ ಮಂಡಳಿ ಯವರ ದುರ್ವರ್ತನೆಯನ್ನು ಖಂಡಿಸಿದರು ಅಲ್ಲದೇ ಕಾಲೇಜಿನಲ್ಲಿ ಪ್ರವೇಶಾತಿ ನಡೆಯುವ ವೇಳೆ ಕಾಲೇಜಿನ ಪ್ರಾಚಾರ್ಯರು ಇಲ್ಲವೆ ಸಂಸ್ಥೆಯ ಅಧ್ಯಕ್ಷ ಅಥವಾ ಕಾರ್ಯದರ್ಶಿ ಯಾರಾದರೂ ಒಬ್ಬರಿದ್ದರೂ ಪರವಾಗಿಲ್ಲ ಆದರೆ ಇಲ್ಲಿ ಜವಾಬ್ದಾರಿ ತೆಗೆದುಕೊಳ್ಳದೇ ಜವಾಬ್ದಾರಿಯಿಂದ ನುಣುಚಿಕೊಂಡು ಹಾವು ಏಣಿ ಆಟ ಆಡುತ್ತಿದ್ದಾರೆ ಎಂದು ದೂರಿದರು .
ಈ ವೇಳೆ ದಾದಪುರದ ಶಿವಾನಂದ , ಶೃಂಗಾರ ತೋಟದ ಲಿಂಗರಾಜ್ ಮಾತನಾಡಿದರು .
ಈ ಸಂದರ್ಭದಲ್ಲಿ ನಂದಿಬೇವೂರು ಚಾರಪ್ಪ , ಮುತ್ತಿಗೆ ರೆವಣಸಿದ್ದಪ್ಪ,ಕಣಿವಿಹಳ್ಳಿ ಮಾರುತಿ, ಶ್ರೀಕಾಂತ್,ದ್ಯಾಮಜ್ಜಿ ರೊಕ್ಕಪ್ಪ, ಮುಂತಾದವರು ಭಾಗವಹಿಸಿದ್ದರು .