Vijayanagara Express

Kannada News Portal

ಮನಸ್ತಾಪ ಮರೆತು , ಬೆರೆತ ಶಾಸಕ ಕರುಣಾಕರ ರೆಡ್ಡಿ ಮತ್ತು ಮಾದಿಗ ಸಮಾಜದ ಮುಖಂಡ ಕಣಿವಿಹಳ್ಳಿ ಮಂಜುನಾಥ್ .

1 min read

ಮನಸ್ತಾಪ ಮರೆತು  ,ಬೆರೆತ ಶಾಸಕ ಕರುಣಾಕರ ರೆಡ್ಡಿ ಮತ್ತು ಮಾದಿಗ ಸಮಾಜದ ಮುಖಂಡ ಕಣಿವಿಹಳ್ಳಿ ಮಂಜುನಾಥ್ .

ಮನಸ್ತಾಪ ಮರೆತು ಒಂದಾದ ಕಣವಿಹಳ್ಳಿ ಮಂಜುನಾಥ ಮತ್ತು ಕರುಣಾಕರರೆಡ್ಡಿ |

ಹರಪನಹಳ್ಳಿ: ಕೆಲವರಿಂದ ಸಣ್ಣ ಪುಟ್ಟ ವಿಷಯಗಳಿಗೆ ಸಮಸ್ಯೆಯಾಗಿ ಕಣವಿಹಳ್ಳಿ ಮಂಜುನಾಥ ಮತ್ತು ನಮ್ಮ ನಡುವೆ ಸಂಪರ್ಕ ಕಡಿತಗೊಂಡಿತ್ತು. ಇವತ್ತಿಗೂ ಅವರು ನಮ್ಮ ಮನಸ್ಸಿನಲ್ಲಿದ್ದಾರೆ. ಅವರ ಬಗ್ಗೆ ನಮಗೂ ಅಭಿಮಾನವಿದೆ, ನಮ್ಮ ಬಗ್ಗೆ ಅವರಿಗೂ ಪರಸ್ಪರ ಅಭಿಮಾನವಿದೆ. ಚುನಾವಣೆಗೆ ಮುಂಚೆ ನಿಮ್ಮನ್ನು ಬಳ್ಳಾರಿಗೆ ಕರೆದುಕೊಂಡು ಬಂದು ಮಾದಿಗ ಸಮಾಜದ ಬೆಂಬಲ ಸೂಚಿಸಿರುವುದನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದು ಶಾಸಕ ಜಿ.ಕರುಣಾಕರರೆಡ್ಡಿ ಹೇಳಿದರು.
ಹರಪನಹಳ್ಳಿ ತಾಲೂಕಿನ ಕಣವಿಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಬಿಜೆಪಿ ಮುಖಂಡ ಕಣವಿಹಳ್ಳಿ ಮಂಜುನಾಥ ಅವರ ತೋಟದಲ್ಲಿ ನಡೆದ ಮಾದಿಗ ಸಮಾಜದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

ಹಿಂದಿನ ಕಹಿ ಘಟನೆಗಳನ್ನು ಮರೆತು ಮುಂದಿನ ದಿನಗಳಲ್ಲಿ ನಿಮ್ಮ ಸಮಾಜದೊಂದಿಗೆ ನಾನು ಸದಾ ಇರುತ್ತೇನೆ. ಏನೇ ಸಮಸ್ಯೆಗಳಿದ್ದರೂ ಕುಳಿತು ಮಾತನಾಡೋಣ. ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸಲು ನಾನು ಸದಾ ಸಿದ್ದನಿದ್ದೇನೆ. ನಾನು ಯಾವುದೇ ಒಂದು ಸಮಾಜದ ಪರವಾಗಿಲ್ಲ, ಎಲ್ಲಾ ಸಮಾಜದವರೊಂದಿಗೆ ಇದ್ದೇನೆ. ಯಾವುದೇ ತರಹದ ಬೇಧಭಾವ ಮಾಡಿಲ್ಲ. ಯಾರೇ ಬಂದರೂ ಗೌರವ ಕೊಡುವ ಕೆಲಸ ಮಾಡಿದ್ದೇನೆ. ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡ ಸಮುದಾಯಗಳನ್ನು ನಿರ್ಲಕ್ಷ್ಯ ಮಾಡಿಲ್ಲ. ಎಲ್ಲರನ್ನು ಸಮಾನವಾಗಿ ಕಂಡಿದ್ದೇನೆ. ಮುಂದಿನ ದಿನಗಳಲ್ಲಲಿ ಏನೇ ಸಮಸ್ಯಗಳಿದ್ದರೂ ಪರಿಹಾರ ಮಾಡಿ ಕೊಡುತ್ತೇನೆ ಎಂದು ಭರವಸೆ ನೀಡಿದರು.

ನಿಮ್ಮ ಸಮಾಜದ ಪ್ರೀತಿ ಮತ್ತು ಅಭಿಮಾನಕ್ಕೆ ಸೋತು ಇಲ್ಲಿಗೆ ಬಂದಿದ್ದೇನೆ. ಮುಂದಿನ ದಿನಗಳಲ್ಲಿಯೂ ಹೀಗೆ ಇರುತ್ತೇನೆ. ರಾಜಕೀಯಕ್ಕಾಗಿ ನಾನು ಮಾತನಾಡುತ್ತಿಲ್ಲ, ಯಾವುದೇ ಸರ್ಕಾರಿ ಸೌಲಭ್ಯವಿದ್ದರೂ ಮಾದಿಗ ಸಮಾಜಕ್ಕೆ ಕೊಡುವ ಕೆಲಸ ಮಾಡುತ್ತೇನೆ. ಕಳೆದ ಎರಡು ವರ್ಷಗಳಿಂದ ಕೊರೊನಾ ಬಂದು ಒಂದಿಷ್ಟು ಅಭಿವೃದ್ದಿ ಕುಂಠಿತವಾಗಿರುವುದು ನಿಜ ಎಂದ ಶಾಸಕರು, ಈ ವರ್ಷ ಗಂಗಾ ಕಲ್ಯಾಣ ಯೋಜನೆಯಡಿ ಕೇವಲ 1 ಅಂಬೇಡ್ಕರ್ ಯೋಜನೆಯಡಿ 1 ಫಲಾನುಭವಿ ಆಯ್ಕೆ ಮಾಡಬೇಕಿದೆ. ಹೀಗಾಗಿ ವಾಪಾಸ್ ತೆಗೆದುಕೊಳ್ಳುವಂತೆ ಸಚಿವರಿಗೆ ಮನವಿ ಮಾಡಿದ್ದೇನೆ. 186ಹಳ್ಳಿಗಳಲ್ಲಿ ಎರಡು ಫಲಾನುವಿಗಳನ್ನು ಹೇಗೆ ಆಯ್ಕೆ ಮಾಡಬೇಕು, ಯಾರಿಗೆ ಕೊಡಬೇಕು ಹೇಳಿ ಎಂದ ಅವರು ಮುಂದಿನ ದಿನಗಳಲ್ಲಿ ನೀವೆಲ್ಲರೂ ನಮ್ಮ ಜೊತೆ ಇರಬೇಕು. ಯಾವುದೇ ವಿಚಾರವಿದ್ದರೂ ನಿಮ್ಮ ಜೊತೆ ನಾನೀರುತ್ತೇನೆ. ಎಲ್ಲರೂ ಜೊತೆಗೂಡಿ ಹೋಗೋಣ ಎಂದರು.
ಶಾಸಕ ಜಿ.ಕರುಣಾಕರರೆಡ್ಡಿ ಅವರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ನಮಿಸಿದರು. ಬಿಜೆಪಿ ಮುಖಂಡ ಕಣವಿಹಳ್ಳಿ ಮಂಜುನಾಥ ಸೇರಿದಂತೆ ವಿವಿಧ ಗ್ರಾಮಗಳೀಮದ ಆಗಮಿಸಿದ್ದ ಮಾದಿಗ ಸಮಾಜದ ಮುಖಂಡರು ಉಪಸ್ಥಿತರಿದ್ದರು.

ಮನಸ್ತಾಪ ಮರೆತು ಒಂದಾದರು!

ಕ್ಷೇತ್ರದ ಶಾಸಕ ಜಿ.ಕರುಣಾಕರರೆಡ್ಡಿ ಹಾಗೂ ಮಾದಿಗ ಸಮಾಜದ ಪ್ರಬಲ ಮುಖಂಡ ಕಣವಿಹಳ್ಳಿ ಮಂಜುನಾಥ ನಡುವೆ ಇದ್ದ ಮನಸ್ಥಾಪ ಕರಗಿದ್ದು, ಇದೀಗ ಪರಸ್ಪರ ಒಂದಾಗಿದ್ದಾರೆ.
ಕಳೆದ 2018 ರಲ್ಲಿ ಶಾಸಕ ಜಿ.ಕರುಣಾಕರರೆಡ್ಡಿ ಅವರ ಗೆಲುವಿಗೆ ಹಗಲಿರುಳು ಶ್ರಮಿಸಿದ್ದ ಬಿಜೆಪಿ ತಾಲೂಕ ಘಟಕದ ಉಪಾಧ್ಯಕ್ಷರಾಗಿದ್ದ ಕಣವಿಹಳ್ಳಿ ಮಂಜುನಾಥ, ಅಂದಿನ ಬಿಜೆಪಿ ತಾಲೂಕು ಅಧ್ಯಕ್ಷ ಕೆ.ಲಕ್ಷ್ಮಣ್, ಮುಖಂಡ ಬೆಣ್ಣೆಹಳ್ಳಿ ರೇವಣ್ಣ ಅವರನ್ನು ಒಳಗೊಂಡ ತಂಡ ಶಾಸಕರೊಂದಿಗೆ ಮನಸ್ತಾಪ ಮಾಡಿಕೊಂಡು ಶಾಸಕರಿಂದ ಅಂತರ ಕಾಯ್ದುಕೊಂಡಿದ್ದರು.
ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗವಹಿಸದಿದ್ದರೂ ಪ್ರತ್ಯೇಕವಾಗಿ ಬಿಜೆಪಿ ಪಕ್ಷಕ್ಕೆ ಸಂಬಂಧಿಸಿದ ಕೆಲವು ಸಭೆ ಸಮಾರಂಭಗಳನ್ನು ಮಾಡಿಕೊಂಡು ಪಕ್ಷದ ಚಟುವಟಿಕೆಯಲ್ಲಿ ಗುರುತಿಸಿಕೊಂಡಿದ್ದರು. ಲೋಕಸಭೆ ಚುನಾವಣೆ ವೇಳೆ ದಾವಣಗೆರೆ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್ ಪರ ಪ್ರಚಾರ ನಡೆಸಿದ್ದರು. ನಂತರದ ದಿನಗಳಲ್ಲಿ ಯಾವುದೇ ಪಕ್ಷಕ್ಕೆ ಸೇರ್ಪಡೆಗೊಳ್ಳದೇ ಬಿಜೆಪಿ ಪಕ್ಷದಲ್ಲಿದ್ದುಕೊಂಡು ತಟಸ್ಥ ನೀತಿ ಅನುಸರಿಸಿ ಶಾಸಕರಿಂದ ಅಂತರ ಕಾಪಾಡಿಕೊಂಡಿದ್ದರು.
ಬಿಜೆಪಿ ಪಕ್ಷದಲ್ಲಿ ಮಾದಿಗ ಸಮಾಜವನ್ನು ಪ್ರಬಲವಾಗಿ ಪ್ರತಿನಿಧಿಸಿದ್ದ ಕಣವಿಹಳ್ಳಿ ಮಂಜುನಾಥ ಅವರು ಶಾಸಕರಿಂದ ಅಂತರ ಕಾಯ್ದುಕೊಂಡ ಹಿನ್ನಲೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಆಡಳಿತ ರೂಢ ಪಕ್ಷದಲ್ಲಿ ಸರ್ಕರಿ ಸೌಲಭ್ಯ ಪಡೆಯುವಲ್ಲಿ ಮಾದಿಗ ಸಮಾಜಕ್ಕೆ ಹಿನ್ನಡೆಯಾಗಿತ್ತು. ಶಾಸಕರೊಂದಿಗೆ ಸಂವಹನ ನಡೆಸಿ ಸಮಾಜಕ್ಕೆ ಸೌಲಭ್ಯ ದೊರಕಿಸಿ ಕೊಡುವ ನಾಯಕರ ಕೊರತೆ ಕಾಡಿತ್ತು. ಇದೀಗ ಮಾದಿಗ ಸಮಾಜದ ಪ್ರಬಲ ಮುಖಂಡ ಕಣವಿಹಳ್ಳಿ ಮಂಜುನಾಥ ಮತ್ತು ಶಾಸಕ ಜಿ.ಕರುಣಾಕರರೆಡ್ಡಿ ಅವರು ಮನಸ್ತಾಪ ಮರೆತು ಒಂದಾಗಿರುವುದು ಬಿಜೆಪಿಯಲ್ಲಿರುವ ಮಾದಿಗ ಸಮಾಜಕ್ಕೆ ಆನೆ ಬಲ ಬಂದಂತಾಗಿದೆ.

Leave a Reply

Your email address will not be published. Required fields are marked *