ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಾಪಸಾತಿಗೆ ರೈತ ಮುಖಂಡರಿಂದ ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಣೆ.
1 min readಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಾಪಸಾತಿಗೆ ರೈತ ಮುಖಂಡರಿಂದ ವಿಜಯೋತ್ಸವ.
ಹರಪನಹಳ್ಳಿ :ಕೇಂದ್ರ ಸರಕಾರ ಕರಾಳ ಕೃಷಿ ಕಾಯ್ದೆಗಳ ಹಿಂಪಡೆದ್ದಕ್ಕೆ ಹರಪನಹಳ್ಳಿ ಪ್ರಗತಿಪರ ಸಂಘಟನೆಗಳ ವತಿಯಿಂದ ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವವನ್ನು ಆಚರಿಸಲಾಯಿತು.
ಈ ವೇಳೆ ಇಜಾರಿ ಶಿರಸಪ್ಪ ವೃತ್ತದಲ್ಲಿ ರೈತ ಸಂಘಟನೆಯ ಮುಖಂಡರು ಸೇರಿ ಪಟಾಕಿ ಸಿಡಿಸಿ ಪರಸ್ಪರ ಸಿಹಿಯನ್ನು ತಿನ್ನಿಸಿ ಸಂತೋಷ ವ್ಯಕ್ತಪಡಿಸಿ ವಿಜಯೋತ್ಸವವನ್ನು ಆಚರಿಸಿದರು .
ಈ ವೇಳೆ ರೈತರ ಸಂಭ್ರಮಾಚರಣೆಯನ್ನು ಉದ್ದೇಶಿಸಿ ಮಾತನಾಡಿದ ಎ.ಐ.ವೈ.ಎಫ್ ರಾಜ್ಯ ಕಾರ್ಯದರ್ಶಿ ಹೆಚ್.ಎಂ.ಸಂತೋಷ್ ಕೇಂದ್ರ ಸರಕಾರ ಕೃಷಿ ಕಾಯ್ದೆಗಳ ಹಿಂಪಡೆಯುವ ನಿರ್ಧಾರ ರೈತ ಹೋರಾಟಕ್ಕೆ ಸಂದ ಜಯವಾಗಿದೆ. ಸದಾ ರೈತರ ಹೋರಾಟ ವನ್ನು ಕಡೆಗಣಿಸಿದ್ದ ಮೋದಿ ಸರಕಾರಕ್ಕೆ ಮುಖಭಂಗವಾಗಿದೆ ಎಂದು ಕೇಂದ್ರ ಸರಕಾರವನ್ನು ಟೀಕಿಸಿದರು.
ರೈತರ ಹೋರಾಟ ಇಲ್ಲಿಗೆ ಮುಗಿದಿಲ್ಲ,ಈ ಕಾರ್ಪೊರೇಟ್ ಕಂಪನಿ ಪರ ಇರುವ ಪ್ರಧಾನಿ, ಕೃಷಿ ಕಾನೂನು ಹಿಂಪಡೆಯುತ್ತೇನೆ ಎಂದಿದ್ದಾರೆ ಆದರೆ ಇನ್ನೂ ಕೃಷಿಕರ ಪರವಾಗಿರುತ್ತೇನೆ ಎಂದಿಲ್ಲ, ಕೇವಲ ಮುಂಬರುವ ಚುನಾವಣೆಯಲ್ಲಿ ಸೋಲುವ ಬೀತಿಯಿಂದ ಕೃಷಿ ಕಾಯ್ದೆಗಳನ್ನು ಹಿಂಪಡೆದಿದ್ದಾರೆ ಅದಕ್ಕಾಗಿ
ಎಚ್ಚರದಿಂದಿರೋಣ. ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಂಬಲ ದೊರಕುವವರೆಗೂ ಹೋರಾಟಕ್ಕೆ ಮುಂದಾಗೋಣ ಎಂದು ತಿಳಿಸಿದರು. ಕಳೆದ ಒಂದು ವರ್ಷದಿಂದ ರೈತ ಹೋರಾಟದಲ್ಲಿ ಹುತಾತ್ಮರಾದ ರೈತರಿಗೆ ಪರಿಹಾರ ಕೊಡಬೇಕೆಂದು ಹೇಳಿದರು.
ರೈತ ಮುಖಂಡ ಕಲ್ಲಳ್ಳಿ ಗೋಣೆಪ್ಪ ಮಾತನಾಡಿ ಒಂದು ವರ್ಷದ ರೈತರ ನಿರಂತರ ಹೋರಾಟಕ್ಕೆ ಜಯ ದೊರಕಿದೆ. ಇನ್ನಾದರೂ ಸರಕಾರ ರೈತ ವಿರೋಧಿ ಧೋರಣೆಯನ್ನು ಕೈಬಿಡಬೇಕೆಂದು ತಿಳಿಸಿದರು.
ಧ್ಯಾಮಜ್ಜಿ ಹನುಮಂತಪ್ಪ ಮಾತನಾಡಿ ಕೇಂದ್ರ ಸರಕಾರ ರೈತ ವಿರೋಧಿ ನೀತಿಗಳನ್ನು ಜಾರಿಗೆ ತರಲು ಮುಂದಾದರೆ ಅವರನ್ನು ಅಧಿಕಾರದಿಂದ ಬದಲಾವಣೆ ಮಾಡಲು ರೈತರು ಸಿದ್ದರಾಗಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರೈತ ಸಂಘಟನೆಯ ಕಲ್ಲಳ್ಳಿ ಗೋಣೆಪ್ಪ, ಡಿ.ಹನುಮಂತಪ್ಪ, ಎ.ಐ.ವೈ.ಎಫ್ ರಾಜ್ಯ ಕಾರ್ಯದರ್ಶಿ ಹೆಚ್.ಎಂ.ಸಂತೋಷ್,ಎ.ಐ.ಎಸ್.ಎಫ್ ರಾಜ್ಯ ಕಾರ್ಯದರ್ಶಿ ರಮೇಶ್ ನಾಯ್ಕ, ಚಂದ್ರನಾಯ್ಕ,ಮುಜೀಬುರ್ ರೆಹಮಾನ್, ರೈತ ಮುಖಂಡರಾದ ಹೆಚ್.ವೆಂಕಟೇಶ್, ಗೌರಿಹಳ್ಳಿ ಹನುಮಂತಪ್ಪ, ಕೊಟ್ರೇಶ್ ಕಾರ್ಮಿಕ ಮುಖಂಡ ನಟರಾಜಪ್ಪ ಮುಂತಾದವರು ಭಾಗವಹಿಸಿದ್ದರು.